ದಶಾವತಾರಿ ವೀರಭದ್ರ ನಾಯಕರ ಹೆಸರಿನಲ್ಲಿ ಮಾರಣಕಟ್ಟೆ ಮೇಳದ ವತಿಯಿಂದ ಪ್ರಶಸ್ತಿ ಸ್ಥಾಪನೆಯಾಗಲಿ - ಪ್ರೋ. ಎಸ್. ವಿ. ಶೆಟ್ಟಿ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಮೇ 29 , 2014
|
ಮೇ 29, 2014
|
ದಶಾವತಾರಿ ವೀರಭದ್ರ ನಾಯಕರ ಹೆಸರಿನಲ್ಲಿ ಮಾರಣಕಟ್ಟೆ ಮೇಳದ ವತಿಯಿಂದ ಪ್ರಶಸ್ತಿ ಸ್ಥಾಪನೆಯಾಗಲಿ - ಪ್ರೋ. ಎಸ್. ವಿ. ಶೆಟ್ಟಿ
ಮಾರಣಕಟ್ಟೆ :
ಮಾರಣಕಟ್ಟೆ ಮೇ೨೮: “ಮಂದಾರ್ತಿ ಮೇಳದಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿ ಮೇಳಕ್ಕೂ ಯಕ್ಷಗಾನ ಕಲೆಗೂ ಘನತೆ ತಂದಿತ್ತು ಯಕ್ಷಗಾನಕ್ಕೆ ಪ್ರಥಮ ರಾಷ್ಟ್ರ ಪ್ರಶಸ್ತಿ ತಂದಿತ್ತ ಹಾರಾಡಿ ರಾಮಗಾಣಿಗರ ಹೆಸರಲ್ಲಿ ಮಂದಾರ್ತಿ ಕ್ಷೇತ್ರವು ಪ್ರತಿ ವರ್ಷ ನೀಡುವ ರಾಮ ಗಾಣಿಗ ಪ್ರಶಸ್ತಿಯ ರೀತಿಯಲ್ಲಿ, ಮಾರಣಕಟ್ಟೆ ಮೇಳವನ್ನು ಘನತೆಯತ್ತ ಕೊಂಡೊಯ್ದ ಇನ್ನೋರ್ವ ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ಕಲಾವಿದ, ಯಕ್ಷಗಾನದಲ್ಲಿ ಹಾರಾಡಿ ಶೈಲಿಯಂತೆ ಮಟಪಾಡಿ ಶೈಲಿ ಎನ್ನುವ ಇನ್ನೊಂದು ತಿಟ್ಟಿಗೆ ನಾಂದಿ ಹಾಡಿದ ಮಾರಣಕಟ್ಟೆ ಮೇಳದಲ್ಲಿ ಹಲವಾರು ವರ್ಷ ಸೇವೆ ಸಲ್ಲಿಸಿ ನೂರಾರು ಶಿಷ್ಯರನ್ನು ರೂಪುಗೊಳಿಸಿದ ದಶಾವತಾರಿ ಮಟಪಾಡಿ ವೀರಭದ್ರ ನಾಯ್ಕರ ಹೆಸರಿನಲ್ಲಿ ಮಾರಣಕಟ್ಟೆ ಕ್ಷೇತ್ರದ ವತಿಯಿಂದ ಪ್ರಶಸ್ತಿ ಸ್ಥಾಪನೆಯಾಗಿ ಪ್ರತೀ ವರ್ಷ ಮಟಪಾಡಿ ಶೈಲಿಯ ಹಿರಿಯ ಕಲಾವಿದರಿಗೆ ಅದು ಸಲ್ಲುವಂತಾಗಬೇಕು” ಎಂದು ಯಕ್ಷಗಾನದ ಹಿರಿಯ ವಿಮರ್ಶಕ ಮಣಿಪಾಲ ಎಂ. ಐ. ಟಿ. ಯ ಪ್ರಾದ್ಯಾಪಕ ಪ್ರೋ. ಎಸ್. ವಿ. ಉದಯ ಕುಮಾರ ಶೆಟ್ಟರು ಹೇಳಿದರು.
ಅವರು ನಿನ್ನೆ ನೆಡೆದ ಮಾರಣಕಟ್ಟೆ ಮೇಳದ ಕೊನೆಯ ದೇವರ ಸೇವೆಯಂದು ಮೇಳದ ವತಿಯಿಂದ ಹಿರಿಯ ಕಲಾವಿದರನ್ನು ಸನ್ಮಾನಿಸಿ ಮಾತನಾಡಿದರು. ಮಾರಣ ಕ್ಷೇತ್ರದ ಆಡಳಿತ ಮಂಡಳಿ ಹಿರಿಯ ಕಲಾವಿದರೊಂದಿಗೆ ಸಿಬ್ಬಂದಿವರ್ಗವನ್ನೂ ಸನ್ಮಾನಿಸಿ ಶ್ಲಾಘನೀಯ ಕಾರ್ಯವೆಸಗಿದೆ. ತೆರಯ ಹಿಂದಿನ ಕಲಾವಿದರನ್ನು ಹೆಚ್ಚು ಹೆಚ್ಚು ಗುರುತಿಸುವಂತಾಗಬೇಕು. ಎಂದು ಅವರು ಅಭಿಪ್ರಾಯಪಟ್ಟರು. ಶ್ರೀ ಕ್ಷೇತ್ರದ ಅನುವಂಶಿಕ ಮುಖ್ತೇಸರ ಸೀತಾರಾಮ ಶೆಟ್ಟಿ ಅದ್ಯಕ್ಷತೆ ವಹಿಸಿದ್ದರು. ಹಿರಿಯ ನಿವ್ರತ್ತ ಕಲಾವಿದರಾದ ಆಲೂರು ತೇಜ, ಚಂಡೆ ವಾದಕ ವಾಸುದೇವ ಭಟ್, ಮೇಳದ ಸಿಬ್ಬಂದಿ ಅಣ್ಣಪ್ಪ ಗೌಡರನ್ನು ಪ್ರಶಸ್ತಿ ಪತ್ರ ನಗದಿನೊಂದಿಗೆ ಸನ್ಮಾನಿಸಲಾಯಿತು.
ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ, ಚಿತ್ತೂರು ಪಂಚಾಯತ್ ಅದ್ಯಕ್ಷ ಸುರೇಂದ್ರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸುರೇಂದ್ರ ಶೆಟ್ಟರು ಮಾತನಾಡಿ ವೀರಭದ್ರ ನಾಯ್ಕರ ಹೆಸರಿನ ಪ್ರಶಸ್ತಿ ಬಗ್ಗೆ ಸೂಕ್ತ ಸಮಯದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು. ಚಿತ್ತೂರು ರಘುರಾಮ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಸರ್ವೋತ್ತಮ ಶೆಟ್ಟಿ ವಂದಿಸಿದರು. ಕಲಾವಿದ ಪ್ರಬಾಕರ ಶೆಟ್ಟಿ ವಂದಿಸಿದರು. ಬಳಿಕ ಎರಡು ಮೇಳಗಳ ಕೊನೆಯ ದೇವರ ಸೇವೆಯಾಗಿ ಕಲ್ಯಾಣತ್ರಯ ಪ್ರಸಂಗ ಪ್ರದರ್ಶಿಸಲ್ಪಟ್ಟಿತು.
|
|
|